ಭಾರತದಲ್ಲಿ ವಾಸಮಾಡುವವರು ಭಾರತೀಯರು,ಬಂಗಾಳದಲ್ಲಿ ಇರುವವರು ಬಂಗಾಳಿಗಳು,ಹಂಗ ತೆಲುಗರು,ಮಲ್ಲುಗಳು,ಮರಾಠಿಗರು,ತಮಿಳರು.ಕನ್ನಡಿಗರು..? ಈ ಶಬ್ದ ಯಾಕೋ ಅಷ್ಟು ಚಿರಪರಿಚಿತ ಅನಸಾಂಗೆ ಇಲ್ಲ..ಯಾಕಂದ್ರ ಅದನ್ನ ಬಳಸ ಬೇಕಾಧಂತಾವ್ರು ಬಳಸುವುದೇ ಇಲ್ಲಾ..ನಾನು ಕನ್ನಡಿಗ ಅಂತ ಹೇಳಿಕೊಳ್ಳಿಕ್ಕೆ ( ಎದಿ ಶಟಿಸಿ ಹೇಳೋ ಮಾತು ದೂರ ಉಳೀತು) ಏನೋ ಒಂಥರಾ ಮುಜುಗರ,ಕೀಳರಿಮೆ..
ಹೌದು ಕನ್ನಡಿಗನಾಗಿ ಈ ಮೇಲಿನ ಮಾತುಗಳನ್ನ ಹೇಳಲಿಕ್ಕೆ,ಬರೀಲಿಕ್ಕೆ ನನಗ ಭಾಳ ದುಃಖ ಆಗ್ಲಿಕತ್ತದ..ಆದ್ರ ಏನು ಮಾಡ್ಲಿ ಹೇಳಲೇ ಬೇಕು..ಯಾವುದೇ ವಕೀಲನಿಗೂ ಸುಳ್ಳು ಅಂತ ಸಾಬೀತು ಮಾಡಲಾಗದ ಸತ್ಯ ಇದು.. ಇದಕ್ಕೆ ಕಾರಣ ಇಲ್ಲಿ ವಾಸಮಾಡುವ ಜನರ ಪರಭಾಷೆಯ ಮೇಲಿರುವ ಅಭಿಮಾನ,ಮಾತೃಭಾಷೆಯ ಮೇಲಿರುವ ಅತಿಯಾದ ನಿರ್ಲಕ್ಶತನ..
ಮೆಕಾಲೆ ಎನ್ನುವ ಒಬ್ಬ ಆಂಗ್ಲ,ಭಾರತದೇಶವನ್ನೆಲ್ಲ ಸುತ್ತಿ ಬಂದು ಅವರ ಸರ್ಕಾರಕ್ಕೆ,ಇಲ್ಲಿ ಇರುವ ಜನರ ಸಂಸ್ಕೃತಿ,ಭಾಷೆ ಉಚ್ಚತಮವಾಗೆದ.ಎಲ್ಲೀತನಕಾ ಇವರಿಗೆ ನಮ್ಮ ಆಂಗ್ಲ ಭಾಷೆಯೇ ಉತ್ತಮ ನಮ್ಮ ಸಂಸ್ಕೃತಿಯೇ ಶ್ರೇಷ್ಠ ಅನ್ನುವ ಹಾಗೆ ಮಾಡುವದಿಲ್ಲವೋ ಅಲ್ಲೀ ತನಕಾ ಇವರನ್ನ ಆಳಲು ಸಾಧ್ಯಾ ಇಲ್ಲಾ ಅಂತ ವರದಿ ಒಪ್ಪಿಸಿದ.ಕ್ರಮೇಣ ಅವರು ಆ ರೀತಿ ಮಾಡಿದ್ರು ಮತ್ತ ಭಾರತವನ್ನ ಎಷ್ಟೋ ವರ್ಷ ಆಳಿದ್ದು ಈಗ ಇತಿಹಾಸ.ಆದ್ರ ಕರ್ನಾಟಕದಲ್ಲಿ ಮೆಕಾಲೆ ಆಗ್ಲಿ,ಆಂಗ್ಲರಾಗ್ಲಿ ಅಂಥಾ ಹರಸಾಹಸ ಮಾಡೋ ಸಮಸ್ಯೇನಾ ಇಲ್ಲಾ..ಹೌದು.. ಇವ್ರು ಬರ್ರಿಪ್ಪಾ ಬರ್ರಿ ನಿಮ್ಮ ಭಾಷೇನೇ ಉತ್ತಮ,ನಿಮ್ಮ ಸಂಸ್ಕೃತಿನೇ ಶ್ರೇಷ್ಠ ಅಂತಾ ಬೆನ್ನಿಗೆ ಬಿದ್ದು ಅನುಸರಿಸ್ತರಾ..
ಕನ್ನಡಿಗರ ಒಂದಿಷ್ಟು ಗುಣ ಮೆಚ್ಚಿ,ಹಾಡಿ ಹೊಗಳಲೇ ಬೇಕು..ಇವರು ಭಾರೀ ಅಂದ್ರ ಭಾರೀ ವಿನಮ್ರರು,ಹೃದಯ ವೈಶಾಲ್ಯತೆ ಉಳ್ಳವರು. ನೀರು ಬೇಕಾ..? ತೊಗೋ…ಜಾಗಾ ಬೇಕಾ..? ತೊಗೋ.. ಮತ್ತೇನು ಬೇಕ್ಪ್ರಿಪಾ ಅಂತ ಅಗದೀ ವಿನಮ್ರತೆಯಿಂದ ಕೇಳಿ ಕೊಡ್ತಾರ..ಮತ್ತ ಬೇರೆದವ್ರ ಜೊತೆ ಭೇದ-ಭಾವ ಇಲ್ಲದೇ ಅನುಸರಿಷ್ಕೊಂಡು ಹೋಗಾವ್ರು..ಮಹಾರಾಷ್ಟ್ರಕ್ಕೆ ಹೋದ್ಯಾ ಅಲ್ಲಿಯವರ ಗತೇ,ತಮಿಳರು ಸಿಕ್ರ ಅವರ ಗತೇ,ತೆಲುಗರು ಸಿಕ್ರ ಅವರ ಗತೇ,ಇನ್ನ ವಿದೇಶದಾವ್ರು ಸಿಕ್ರಂತೂ ಮುಗುದಾ ಹೋತು ಜೋಕುಮಾರನ ಗತೇ ಬಾಲಾ ಅಲ್ಯಾಡಿಷ್ಕೊಂಡು ಹೊಂಟಬಿಡ್ತಾರ..
ಕನ್ನಡದವರು ಯಾರಾರೆ ಸಿಕ್ರೋ ಇಲ್ಲೋ ಆಕಾಶದ ಕಡೆ ಇಲ್ಲಾ ನೆಲದ ಕಡೆ ಮಾರಿ ಮಾಡ್ಕೊಂಡು ಹೊಂಟ ಬಿಡೋದು.. ಅಪ್ಪಿ ತಪ್ಪಿ ಕಣ್ಣಿಗೆ ಕಣ್ಣು ಸಿಕ್ಕತು ಅಂದ್ರ ಇಂಗ್ಲಿಷ್ನ್ಯಾಗ ಮಾತಾಡಿ ಬೈ ಬೈ ಅಂದ ಬಿಡೋದು..ಹಿಂತಾ ಮಂದಿ ಹಗಲ್ನ್ಯಾಗ ದೀಪ ಹಚ್ಚಿ ಹುಡುಕಿದ್ರೂ ಸಿಗಾಂಗಿಲ್ಲ..
ಇದು ಇಲ್ಲಿಂದಾ ಬ್ಯಾರೇ ಕಡೆ ಹೊದಾವ್ರ ಕಥೀ ಆತು,ಇನ್ನ ಅಲ್ಲಿಂದಾ ಇಲ್ಲೇ ಬಂದಿರ್ತಾರಲ್ಲ..ಅವರಿಗಂತೂ ಹಬ್ಬೋ ಹಬ್ಬ..
ಎಲ್ಲಾ ಕಡೇನೂ ಅವರಿಗೆ ಮಣೆ.ಅವರ ಜೊತಿ ಅವರ ಭಾಷೆ ಕಲಿತು ಒಡನಾಡೋ ಜನ,ಹಿಂದಾ ಮುಂದಾ ಅಡ್ಯಾಡ್ಲಿಕ್ಕೆ ನಾಮುಂದಾ ತಾಮುಂದಾ ಅಂತಾ ಬರೋವ್ರಿಗೆ ಏನೂ ಕಮ್ಮಿ ಇಲ್ಲಾ..ಹಿಂಗ ಪರಿಸ್ಥಿತಿ ಅನುಕೂಲಕರ ಆಗಿರೋವಾಗ..ಹೊರಗಿಂದಾ ಬಂದೋವ್ರು,ಇದ್ದಷ್ಟೂ ವರ್ಷ ಕನ್ನಡ ಕಲಿಯೂದೂ ಇಲ್ಲಾ ,ತಿಳ್ಕೊಲ್ಲೂದೂ ಇಲ್ಲಾ ,ಮತ್ತ ಮ್ಯಾಲೆ ಹೆಮ್ಮೆ ಇಂದಾ ನಾನು ಇಷ್ಟು ವರ್ಷ ಇದ್ದೆ ನನಗ ಕಲಿಯೋ ಪ್ರಸಂಗಾನೆ ಬರ್ಲಿಲ್ಲ ಅಂತಾ ಅನ್ಕೊತಾ ನಕ್ಕೋತ ಅಡ್ಯಾಡ್ತಾರಾ..
ಅಯ್ಯೋ ಕನ್ನಡವೇ ಆಹಾ ಕನ್ನಡಿಗರೇ ಅಂತ ನಿಜವಾದ ಕನ್ನಡಿಗರಿಗೆ ಅನಸದಾ ಬಿಟ್ಟೀತೇನು ..?
ನಮ್ಮವರು,ನಮ್ಮತನ,ನಮ್ಮ ರಾಜ್ಯ,ನಮ್ಮ ಭಾಷೆ,ಭಾಷಿಕರು ಅನ್ನೋ ಅಭಿಮಾನ ಪುಡಿಗಾಸಿನಷ್ಟೂ ಇಲ್ಲಾ..ಕನ್ನಡ ರಾಜ್ಯೋತ್ಸವದ ಹಿಂದ ಮುಂದಾ ೨ ದಿವ್ಸಾ ಓಣಿ ಓಣ್ಯಾಗ,ಕಂಡ ಕಂಡಲ್ಲೇ, ಈ-ಪತ್ರ( ಈ-ಮೇಲ್) ದಾಗ ನಮ್ಮ ಕನ್ನಡ,ನಮ್ಮ ಕನ್ನಡ,ನಾವು ಕನ್ನಡಿಗರು ಅಂತ ಗಂಟ್ಲಾ ಹರಕೋತ ಊರತುಂಬಾ ಕೆಂಪು ಹಳದಿ ಧ್ವಜಾ ಹಾರಿಸಿದ್ರು ಅಂದ್ರ ಮುಗದು ಹೋತು..ಮುಂದಿನ ವರ್ಷದ ತನಕ “ಕ” ಅಂತಾ ಉಸುರು ಸುದಾಕ್ಕ ಎತ್ತಂಗಿಲ್ಲ..
ಜೆ ಪೀ ರಾಜರತ್ನಂ ಅವರು ಅಭಿಮಾನದಿಂದಾ ಒಂದು ಮಾತು ಹೇಳ್ತಾರ..
ನರಕಕ್ಕೆ ಇಳಿಸ್ಲಿ
ನಾಲಗೆ ಸೀಳಿಸ್ಲಿ
ಬಾಯಿ ಹೋಲಿಸಿ ಹಾಕಿದ್ರೂನೂ
ಮೂಗ್ನ್ಯಾಗ ಕನ್ನಡ ಪದವಾಡ್ತೇನಿ.. ಅಂತಾ
ಅವರೇನಾದ್ರೊ ಜೀವಂತಾ ಇದ್ದಿದ್ರಾ…ಇಲ್ಲಪಾ..ಅವರ ಅವಸ್ಥೆ ನನಗ ಕಲ್ಪಿಸಿಕೊಂಡು ಬರೀಲಿಕ್ಕೆ ಸಾಧ್ಯನೇ ಇಲ್ಲಾ..
ಪರ ಊರನ್ಯಾಗ,ಪರ ರಾಜ್ಯದಾಗ,ಪರದೇಶದಾಗ ಒಂದು ೩-೪ ಕನ್ನಡದ ಕುಟುಂಬಾ,ಗೆಳ್ಯಾರು,ಹೋಗೋದು-ಬರೋದು-ಇರೋದು,ಕೂಡಿ ಬಾಳೋದನ್ನ ಈ ಕಣ್ಣುಗಳು ಕಂಡೇ ಇಲ್ಲಾ..ಆದ್ರ ಬ್ಯಾರೇದಾವ್ರ ಜೊತಿ ಅವರ ಒಡನಾಟ ನೋಡ್ಬೇಕು..ಅಬ್ಬಬ್ಬ ಎನಂತೀರಿ..ಅಗದೀ ಗಳಸ್ಯಾ ಕಂಠಸ್ಯಾ ಸಂಭಂಧಾ..ಅವರವರು ಮಾತಾಡ್ಕೊಬೇಕಾದಾವಾಗ ನೋಡ್ಬೇಕು ನೀವು ಇನ್ನೂ..ಅವ್ರು ಏನು ಅಂತಾರ ಏನು ಮಾತಾಡ್ತಾರ ತಿಳೀತನ ಇರೂದಿಲ್ಲ..ಮಾರೀ ಮ್ಯಾಲೆ ಒಂದು ನಗು ಇಟ್ಕೊಂಡು ಅತ್ಲಾಗ ಒಮ್ಮೆ,ಇತ್ಲಾಗ ಒಮ್ಮೆ ನೋಡ್ಕೋತ,ಅವ್ರು ನಕ್ಕ ಕೂಡ್ಲೇ ಏನು ಮಹಾ ತಿಳಿದಾವ್ರಗತೆ ಫಕ್ಕ ಅಂತ ನಕ್ಕು ಬಿಡೋದು..ಏನು ತಿಳೀತೋ ಏನು ಮಣ್ಣೋ..
ಅದ ನಮ್ಮ ಮಂದಿ ಅನ್ಕೊತಾ,ಅವರನ್ನ ಕಲೆ ಹಾಕಿ ಬಂದು ಗುಂಪು ಮಾಡಿ ಅವರ ಭಾವನೆ ಅಭಿರುಚಿಗೆ ಸ್ಪಂದಿಷ್ಕೊತಾ ಭಾಷೆ ಬೆಳಿಸೋ ವಿಚಾರನ..ಇಲ್ಲಾ.ಆದ್ರ ಬಂದು ಮಾತಂತೂ ಅಗದೀ ತಪ್ಪದೇ ಎಲ್ಲರೂ ಅಂತಾರಾ..
” ಕನ್ನಡದವರು ಹಿಂಗಲೇಪಾ..ಮಾತಾಡೋದೇ ಇಲ್ಲಾ..ನಾವು ನಮ್ಮವರು ಅನ್ನೋ ಸ್ವಾಭಿಮಾನಾನೇ ಇಲ್ಲಾ ಇವ್ರಿಗೆ” ಅಂತ.
ಇಲ್ಲೇ ನಾವು ಸ್ವಲ್ಪಾ ವಿಚಾರಾ ಮಾಡಿದ್ರ,ಪ್ರತೀ ಕನ್ನಡಿಗ,ಮತ್ತೊಬ್ಬ ಕನ್ನಡಿಗನ ಪ್ರತಿ ಅನ್ನೋ ಮಾತಿದು ! ಅಂದ್ರಾ ನಾವು ಎಲ್ಲಾರೂ ಒಂದೇ ರೀತಿ ಅಂಧಂಗ..
ಅಬ್ಬಾ.!! ಒಂದ್ರಾಗರೇ ಸಹಮತ,ಏಕತೆ ಅದಲಾ..ಭಾಳ್ ಭಾಳ್ ಖುಷಿ ಆತು..
ಕನ್ನಡಿಗರೇ ಭಾಷಾಭಿಮಾನ ಬೆಳಿಸಿಕೊಳ್ರಿ.ಕನ್ನಡ ಭಾಷೆ ಸರಳ ಸುಂದರ ಅರ್ಥಗರ್ಭಿತ.ಒಬ್ಬ ಕವಿ ಬರೀತಾರ..
“ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ ..ವಾಣಿಯ ವೀಣೆಯ ಸ್ವರಮಾಧುರ್ಯವೋ ಸುಮಧುರ ಸುಂದರ ನುಡಿಯೋ”ಅಂತಾ..ಸರಸ್ವತಿಯ ವೀಣೆಯ ನುಡಿಯಷ್ಟು ಸುಮಧುರ ಸುಂದರವಾದ ಈ ಭಾಷೆ,ಜೇನಿನಷ್ಟು ಸಿಹಿ,ಹಾಲಿನಷ್ಟು ಶುಭ್ರ,ಹಾಗೂ ಅಮೃತದಷ್ಟು ಶ್ರೇಷ್ಠ ವಾಗಿ ಕವಿಕಣ್ಣಿಗೆ ಕಾಣ್ಲಿಕತ್ತದ.
ಈ ಭಾಷೆದಾಗ ರಗಳೆ,ಕಾವ್ಯಗಳು,ಚಂಪೂ ಕಾವ್ಯಗಳು,ಪದ್ಯಗಳು,ಗದ್ಯಗಳು,ತ್ರಿಪದಿಗಳು,ಚತುಷ್ಪದಿಗಳು,ವಚನಗಳು,ದಾಸರ ಪದಗಳು ಹಿಂಗಾ ಎಲ್ಲ ರೀತಿಯ ಸಾಹಿತ್ಯಾನೂ ಅವ.ಅದಕ್ಕೆ ಮತ್ತೊಬ್ಬ ಕವಿ (ಮಹಾಕವಿ ರನ್ನ ಇರಬೇಕು) “ಕನ್ನಡ ಕನ್ನಡ ಹಾಸವಿಗನ್ನಡ ಕನ್ನಡದಲಿ ಹರಿ ಬರೆಯುವನು,ಕನ್ನಡದಲಿ ಹರ ತಿರಿಯುವನು ಅಂತ..(ತಿರಿ=ಭಿಕ್ಷೆ) ..ಭಾಷೇನೆ ಇಷ್ಟು ಶ್ರೇಷ್ಠ ಅಂದ ಮ್ಯಾಲೆ ಆ ನಾಡಿನಾ ಸಂಸ್ಕೃತಿನೂ ಅಗದೀ ಶ್ರೇಷ್ಠ ಇರಲೇಬೇಕು..ಇದು ನಮ್ಮ ಸ್ವಂತದ್ದೇ ಆಗಿರುವಾಗಾ ಬೇರೆ ಭಾಷೆ,ಸಂಸ್ಕೃತಿ ಯದಕ್ಕ ಬೇಕ್ರಿಪಾ..?ಇದನ್ನ ಉಳಿಸಿ ಬೆಳೆಸೋ ಜವಾಬ್ದಾರಿ ತೊಗೋಬಾರ್ದಾ..?
ಎಷ್ಟು ಹೇಳಿದ್ರೂ ಕಡಿಮೀನೆರೀ,ಎಲ್ಲೀ ತನಕಾ ಕನ್ನಡಿಗರಿಗೆ ಸ್ವಾಭಿಮಾನ ಜಾಗೃತ ಆಗಾಂಗಿಲ್ಲೋ ಅಲ್ಲೀ ತನಕಾ.. ಹೇಳಿದ್ದೆಲ್ಲ ಬೋರಗಲ್ಲ ಮ್ಯಾಲೆ ನೀರು ಸುರುಧಂಗಾ..
ಕೊನೆಗೆ,
ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ .. -ರಾಷ್ಟ್ರಕವಿ ಕುವೆಂಪು
ಜೈ ಕರ್ನಾಟಕ ಮಾತೆ..
*ನಾನು ಇಲ್ಲೆ ಕನ್ನಡದವರು ಅನ್ಯಭಾಷೆ ಕಲೀಬ್ಯಾಡ್ರಿ, ಬ್ಯಾರೆ ಸಂಸ್ಕೃತಿ ಬಗ್ಗೆ ತಿಳ್ಕೊಬ್ಯಾಡ್ರಿ .. ಅಂತ ಸರ್ವಥಾ ಅನ್ಲಿಕತ್ತಿಲ್ಲ.. ಆದ್ರಾ ಮಾತೃಭಾಷೆಯ ಬಗ್ಗೆ ಸ್ವಾಭಿಮಾನಿಗಳಾಗಿ,ಭಾಷೆ ಉಳಿಸಿ ಬೆಳೆಸೋಣು ಅನ್ನುವ ಉದ್ಯೇಶ ಮಾತ್ರ ತಿಳಿಸ್ಲಿಕತ್ತೆನಿ..ಕನ್ನಡಿಗನು ನೀನೆಂಬಾ ಅಭಿಮಾನವಿರಲಿ ಅಂತ ಮಾತ್ರಾ ಹೇಳಲಿಕತ್ತೆನಿ.. ಅನ್ಯಥಾ ಭಾವನೆ ಬೇಡಾ..